Saturday, 22 February 2025

ಶೂನ್ಯವೋ.. ಪರಿಪೂರ್ಣವೋ.. ಅದರ ನಡುವೆಯೆಲ್ಲೊ

ಆತ್ಮವು ದೇಹವ ಹಿಡಿದಿರುವುದೇಕೋ

ಶೂನ್ಯವ ಪೂರ್ಣಗೊಳಿಸಲೋ ತುಂಬಿರುವುದನು ಕಳೆದುಕೊಳ್ಳಲೋ


ಶೂನ್ಯವಾದರೆ ಜಗತ್ತಿಗೆ ಅರ್ಪಿಸುವುದೆಂತೋ

ಕತ್ತಲಲಿ ಬೆಳಕ ಕಾಣುವುದೆಂತೋ

ಬಾಡಿದ ಹೂವನು ಮುಡಿಗೆ ಏರಿಸುವುದೆಂತೋ

ಬರದಲ್ಲಿ ಬೆಳೆ ಬೆಳೆಯುವುದೆಂತೋ


ಕಲಿಯದೆಯೇ ಅರಿಯಲು ಸಾದ್ಯವಗದೇನೋ

ಅಜ್ಞಾನದಲ್ಲಿ ಆಡಂಬರದ್ದೇ ಆಟವೇನೋ

ಹಸಿದ ಹೊಟ್ಟೆಯಲಿ ಹಾತೊರೆಯುವಿಕೆಯೇ ಹೆಚ್ಚೆನೋ

ಇಲ್ಲದಿರುವುದರ ಮೇಲೆ ಆಸೆಯೇ ಅಟ್ಟಹಾಸವಾಡುವುದೇನೋ

ತುಂಬಿಸಿಕೊಳ್ಳುವ ತುಡಿತವೇ ತುದಿಗಾಲಲ್ಲಿರುವುದೇನೋ

ಇನ್ನೂ ಬೇಕು ಎನ್ನುವ ಚಿಂತೆಯು ಮುಗಿಯದೇನೋ

ಕೊರತೆಯಿದ್ದಲ್ಲಿ ಪ್ರೀತಿ ಹುಟ್ಟಲು ಅಸಾಧ್ಯವೇನೋ


ಆತ್ಮವು ದೇಹವ ಇನ್ನೂ ಹಿಡಿದಿರುವುದೇತಕೆ

ಶೂನ್ಯವ ಪೂರ್ಣಗೊಳಿಸಲೋ ತುಂಬಿರುವುದನು ಕಳೆದುಕೊಳ್ಳಲೋ


ತುಂಬಿ ತುಳುಕಾಡುವಂತಿದ್ದರೆ ಅದರ ಭಾರವ ತಡೆಯುವುದೆಂತೋ

ಬೇಸಿಗೆಯ ಬೇಗೆಯಲಿ ತಣಿಸುವುದೆಂತೋ

ಪ್ರವಾಹದಲ್ಲಿ ಪವಡಿಸುವುದೆಂತೋ

ಕಳೆಯೇ ಹೆಚ್ಚಿದ್ದಲ್ಲಿ ಬೆಳೆಯ ಬೆಳೆಯುವುದೆಂತೋ


ಅಹಂಕಾರವ ಬದಿಗಿಟ್ಟು ಅರ್ಹನಾಗುವುದು ಹೇಗೆ

ಸೇವೆಯೆ ಮಾಡದೆ ಆನಂದವ ಅನುಭವಿಸುವುದು ಹೇಗೆ

ಹೊರಗಿನ ಗಲಾಟೆಯಲ್ಲಿ ಅಂತರಂಗದ ಪಿಸುಮಾತು ಕೇಳಿಸುವುದು ಹೇಗೆ

ವಸ್ತುಗಳ ಮೇಲಿನ ವ್ಯಾಮೊಹದ ಮಧ್ಯದಲ್ಲಿ ವಾಸ್ತವ್ಯವನ್ನು ಒಪ್ಪಿಕೊಳ್ಳುವುದು ಹೇಗೆ, ಜೀವನವನು ಪ್ರೀತಿಸುವುದು ಹೇಗೆ


ಸೂರ್ಯನು ಮುಳುಗದಿದ್ದರೆ ಹುಟ್ಟುವುದೆಲ್ಲಿ

ಅಮವಾಸ್ಯೆ ಬರದೇ ಹುಣ್ಣಿಮೆ ಕಾಣುವುದೆಲ್ಲಿ

ಹೂವು ಬಾಡಿ ಗೊಬ್ಬರವಾಗದೇ ಕುಸುಮ ಚಿಗುರುವುದೆಲ್ಲಿ

ಮೋಡ ಮೂಡದೆ ಮಳೆ ಬರುವುದೆಲ್ಲಿ


ಖಾಲಿಯ ಖಿನ್ನತೆಯಿಂದಲೇ ಪೂರ್ಣತ್ವದ ಪ್ರಸಾದವನ್ನು ಕೊಡುವುದು ಸೃಷ್ಟಿಯ ನಿಯಮ

ಖಾಲಿ ಮಾಡುವುದೋ ಅಥವಾ ತುಂಬಿಸುವುದೋ ಅದು ಅಂತರಾತ್ಮದ ಮನನ

ಪರಿಪೂರ್ಣತ್ವದಿಂದ ಅರ್ಪಿಸಿ ಶೂನ್ಯವಾಗುವುದರೆಡೆಗೆ ಆತ್ಮದ ಗಮನ 

ನಮನ ನಮನ ನಮನ


-ದೀಪಶ್ರೀ

Tuesday, 28 March 2023

ಗರ್ಭಗುಡಿ

ಗರ್ಭಗುಡಿಯದು ದೇವರ ಆಲಯಸ್ಥಾನ

ಅಹುದೆ ಗರ್ಭವು ಅದಕ್ಕೆ ಸಮಾನ?


ಅಲ್ಲವೇ ಬ್ರಹ್ಮಾಂಡವಿದು ಜಗದಂಬೆಯ ಗರ್ಭ ಸಂಜಾತ?

ಅವಳ ಒಡಲ ಕಂದಮ್ಮಗಳ ಗುಡಿ ಸ್ವಂತ

ಹೊತ್ತು ಹೆತ್ತು ಜೀವ ಕೊಟ್ಟು ಜೀವಿಸು ಹೋಗು ಮಗುವೇ ಎಂದು ತ್ಯಜಿಸಿದಾತಳು

ಹರಸಿ ಕಲಿಸಿ ನಗಿಸಿ ಶಿಕ್ಷಿಸಿ ಕರ್ಮವ ಕಳೆವವಳು


ಎಂತು ಹೇಳಲಿ ಅವಳ ಗರ್ಭದ ಮಹಿಮೆಯ ?

ಅದೆಂತು ಹೇಳಲಿ ಗರ್ಭದ ಮಹಿಮೆಯ?


ಶಿಶುವ ಧರಿಸಿ ಜೀವವ ಕೊಟ್ಟು

ತನ್ನದೆಂದು ಬೆಳೆಸಿ ಅಪ್ಪಿ 

ಪ್ರೀತಿ ವಿಶ್ವಾಸಗಳ ಬಳ್ಳಿ ಹಬ್ಬಿಸಿ 

ಒಡಲ ರಕ್ತಮಾತ್ರವಲ್ಲ ಮಮತೆಯ ಧಾರೆಯೆರೆದು 

ಸಮಯ ಬಂದಾಗ ಬೀಳ್ಕೊಡುವಳು ಅದೆಂತೋ!!?

ಕೊಂಡಿ ಕಳಚುವಳೆಂತೋ?

ಆ ನೋವು ಸಹಿಸುವಳೆಂತೋ

ಕಣ್ಣೀರಲ್ಲಾ, ರಕ್ತ ಹರಿಸಿ ಸಮಾಧಾನ ತಂದು ಕೊಳ್ಳುವಳೇನೋ 


ಬೀಳ್ಕೊಡುಗೆಯೋ ಅದು ಭಗವತ್ಪಾದಗಳಿಗೆ ಅರ್ಪಣೆಯೋ

ತನ್ನ ಜೀವಾತ್ಮವೂ ಪರಮಾತ್ಮನ ಅಂಶವೋ 

ತಾಯಿಯಾಗಿ ಮರುಜನ್ಮವೋ ಅವಳ ಮೋಕ್ಷಕ್ಕೆ ದಾರಿಯೋ

ಆದಳು ಅವಳು ಅದೆಲ್ಲಾದಕ್ಕೂ ಧನ್ಯಳು


ಅಹುದು ಬ್ರಹ್ಮಾಂಡವಿದು ಜಗದಂಬೆಯ ಗರ್ಭ ಸಂಜಾತ

ಚೈತನ್ಯರೂಪದಲ್ಲಿಹುದು ಪಂಚಮಹಾಭೂತ

ಕಣ ಕಣದಲ್ಲಿರುವನು ಪರಮಾತ್ನನೇ ಅನಂತ

ಅಂತರಂಗದ ದೃಷ್ಟಿಯ ಅರಿವಿದು ಚಿತ್ತ 


ಅದೆಂತು ಬಣ್ಣಿಸಲಿ ಗರ್ಭದ ಕ್ಷಮತೆಯ

ಗರ್ಭವು ಗರ್ಭಗುಡಿಯಾದ ಬಗೆಯ 

Wednesday, 14 April 2021

Time is an all time winner



Just hold on!!! Wait a sec!


Are we trying to beat time?


Sit back and try to remember those days when you actually spent time doing things. 

Times when you put in effort and yet you were all up with energy. 

Times when the processes were more important than the results. 


Then we valued our efforts.   

Then we had patience to wait. 

Then we spent time in real.

Then we were high creating memories

Then we lived. We experienced.


Now...


We have automated things yet we are busy!

Machines work and yet we are tired!

We are high creating a fantasy world!

We are just surviving.


Yes! We are trying to beat time!


But time is an all time winner.


-ದೀವಿಗೆ

Thursday, 11 July 2019

ನಿಸರ್ಗದ ನಡುವೆಯಲ್ಲೊಂದು ನಿಶ್ಚಿತಾರ್ಥ



ನಿಸರ್ಗದ ನಡುವೆಯಲ್ಲಾದ ನಮ್ಮ ನಿಶ್ಚಿತಾರ್ಥದ ದಿವಸ
ಎಲ್ಲರ ತುಟಿಯಂಚಿನಲ್ಲಿತ್ತು ಮುಗುಳ್ನಗೆಯ ಮಂದಹಾಸ

ನನಸಾಗಿತ್ತು ಮನೆಯವರ ಕನಸು
ಸಂತಸದಲಿ ಅಂದು ಇಂದು ಅವರ ಮನಸು

ಬೆರಳಿನಲಿತ್ತು ಪ್ರೀತಿಯ ಉಂಗುರ
ಭಗವಂತನ ಆಶೀರ್ವಾದವ ತಲುಪಿಸಿತ್ತು ಅಂಬರ

ಬೆಳಗಿದ್ದವು ಕಂಗಳ ದೀವಿಗೆ
ಬೆಳದಿಂಗಳಾಗಿತ್ತಂದು ಹೊಸ ಬಾಳಿಗೆ

ಮುಖವ ಕೆಂಪೇರಿಸಿತ್ತು ಅವನ ಆ ಕಂಗಳ ಹೊಳಪು
ಲಜ್ಜೆಯಿಂದ ಹೆಚ್ಚಿತ್ತು ನನ್ನ ಅಂದಿನ ಒನಪು

ಭರವಸೆಯ ನೀಡಿತ್ತು ಅವನ ಕೈಯ ಹಿಡಿತ
ನನ್ನವನೆಂದಿತ್ತು ಮನಸ್ಸಿನ ಮಿಡಿತ

ನಿಶ್ಚಿತಾರ್ಥವಾಗಿತ್ತು ಆ ದೈವ ರಚಿತ
ಈ ರಚನೆಯಲ್ಲಿ ನಾನವನಿಗೆ ಬಂಧಿತ ವಂದಿತ

#೧೧-೦೭-೨೦೧೮

Sunday, 21 April 2019

ಕಂಗಳ ಕೊಳದ ತಾವರೆ


ಹೇಗಿರುವೆಯೋ ಎಂತಿರುವೆಯೋ ಎಂದು ಅಂದು
ಹೇಗಿದ್ದರೂ ನನ್ನವನೆಂಬ ಮುದ ಇಂದು

ಗಂಭೀರ ವದನನೋ ನಗು ಚೆಲ್ಲುವೆಯೋ ಎಂದು ಅಂದು
ಗಾಂಭೀರ್ಯವು ಚಂದ ನಗುವು ಇನ್ನಷ್ಟು ಚಂದ ಇಂದು

ಮಾತಾಡುವೆಯೋ ಬರೀ ಮೌನವೋ ಎಂದು ಅಂದು
ಮೌನದಲ್ಲೂ ಮುದ್ದು ಮಾತುಗಳು ಇಂದು

ಆರಂಭದ ಆಡಂಬರವೋ ಅಂತ್ಯದವರೆಗೋ ಎಂದು ಅಂದು
ಆರಂಭ ಅಂತ್ಯಕ್ಕೆ ಸಿಲುಕದ ಅನಂತತೆ ಎಂಬ ಅರಿವು ಇಂದು

ಭಾವನೆಗಳಿಗೆ ಮಿಡಿಯುವೆಯೋ ಸಿಡಿಮಿಡಿ ಎನ್ನುವೆಯೋ ಎಂದು ಅಂದು
ಭಾವನೆಗಳ ಬೆಳದಿಂಗಳಲಿ ನುಡಿ(ಮುತ್ತು)ಗಳು ಇಂದು

ಸುಮ್ಮನೆಯೋ ಸ್ನೇಹಕ್ಕೆ ಈಡಾಗುವುದೋ ಎಂದು ಅಂದು
ಸ್ನೇಹದ ಕಡಲಲ್ಲಿ ಪ್ರೀತಿಯ ಅಲೆಗಳಂತೆ ಇಂದು

ನಿನ್ನ ಕಂಗಳ ಕೊಳದಿ ಬೇರೂರಿದ್ದು ಅಂದು
ಅಲ್ಲಿ ಅರಳಿದ ತಾವರೆ ನಾನಿಂದು


#22ನೇ ಏಪ್ರಿಲ್

Wednesday, 27 December 2017

ಶೃಂಗೇರಿಯ ಮಡಿಲಲ್ಲೊಂದು ಮುಂಜಾನೆ

ಆಗಸವನ್ನೇ ಭೇದಿಸುವೆನೆಂದು ಹೊರಟು ಮರೆಯಾಗಿತ್ತು ಸಹ್ಯಾದ್ರಿಯ ಶಿಖರ. ಗೆಲುವಿನ ಕಹಳೆಯ ನಾದವ ಹೊರಡಿಸುತ್ತಾ ನಿಂತಿದ್ದವು ಮೋಡಗಳು. ಮೇಘರಾಜನ ಬಾಣಗಳಂತಿದ್ದರೂ ತಂಪನೀಯುತ್ತಿದ್ದವು ಮಳೆ ಹನಿಗಳು. ನಭದ ನೀಲಿಮೆಯನ್ನು ಮುಟ್ಟುವ ಆಸೆಯಿಂದ ಹೊರಟು ನಿಂತಿದ್ದರೂ ವಸುಂಧರೆಯನ್ನು ಬಿಡಲು ಮನಸ್ಸಿಲ್ಲದೆ ಮಣ್ಣಿಗೆ ಅಂಟುಕೊಂಡಿದ್ದವು ತರುಗಳು. ಈ ಮರಗಳ ನಡುವೆಯಿಂದ ತಂಪನೆಯ ಗಾಳಿ ಮೆಲ್ಲಗೆ ನುಸುಳಿ ಬಂದು ಕ್ಷೇಮ ಸಮಾಚಾರ ವಿಚಾರಿಸುತಿತ್ತು. ಇದ್ದೂ ಇಲ್ಲದಂತೆ ಮೌನವಾಗಿ ಹರಿಯುತ್ತಿದ್ದಳು ತುಂಗೆ, ಮನಸ್ಸನ್ನು ಶಾಂತಗೊಳಿಸುತ್ತಾ, ಆತ್ಮವನ್ನು ಶುದ್ಧಗೊಳಿಸುತ್ತಾ. ಕರುವು ತನ್ನ ತಾಯಿಯ ಮೊಲೆಯ ಅಮೃತವನ್ನು ಹೀರುತ್ತಿದ್ದರೆ ಮಳೆಯಿಂದ ಪುಳಕಿತಗೊಂಡ ಕೋಗಿಲೆಯು ಸುಪ್ರಭಾತವ ಹಾಡುತಿತ್ತು. ಇಲ್ಲಿಯೇ ನೆಲೆಸಿದ್ದಳು ಶೃಂಗೇರಿಯ ಶಾರದೆ. ಶಾರದೆಯ ಶೃಂಗಾರದಲ್ಲಿ ಕಿಂಚಿತ್ತು ಕಮ್ಮಿ ಮಾಡಿರಲಿಲ್ಲ ಪ್ರಕೃತಿ ಮಾತೆ. ಹಸಿರಿನ ಹಾಸಿನ ಮೇಲೆ ರಾರಾಜಿಸುತ್ತಾ, ಪರಿಸರದ ಸುಗಂಧದಿ ಸುತ್ತುವರೆದು, ನಾನಾ ಕುಸುಮಗಳಿಂದ ಅಲಂಕೃತಗೊಂಡು, ಹಕ್ಕಿ ಪಕ್ಷಿಗಳ ಸಂಗೀತ ಆಲಿಸುತ್ತಾ, ಅಳಿಲು ಚಿಟ್ಟೆ ಜಿಂಕೆ ನವಿಲುಗಳ ಆಟಗಳನ್ನ ನೋಡುತ್ತಾ ಸಂಭ್ರಮಿಸಿದ್ದಳು ಶಾರದೆ. 
ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡಷ್ಟು ಕಮ್ಮಿ. ನೋಡಿದರೆ ಮನಸ್ಸಿಗೆ ಬರುವ ಪ್ರಶ್ನೆ ಒಂದೇ. ಶೃಂಗೇರಿ ಶಾರದೆಯನ್ನ ಅಲಂಕರಿಸಿದ್ದಳೋ ಅಥವ ಶಾರದೆ ಶೃಂಗೇರಿಯನ್ನ ಅಲಂಕರಿಸಿದ್ದಳೋ ಎಂದು.

Wednesday, 20 September 2017

ಅಂಬುಧಿ

ಅಂಬುಧಿಯ ಆಳವನು ಅಳೆಯುತ್ತಾ
ಅದರ ರಹಸ್ಯವನು ಅರಸುತ್ತಾ
ಅನಿಸಿಕೆಗಳ ಅಲೆಗಳಲ್ಲಿ ಮುಳುಗೇಳುತ್ತಾ
ಆಲೋಚನೆಗಳ ಆಸರೆಯಿಂದ ಅಂಚನು ತಲುಪಿ
ಅಂತ್ಯವೆಂದುಕೊಂಡಾಗಲೇ ತಿಳಿದಿದ್ದು ಅದು ಇನ್ನೊಂದರ ಆದಿ ಎಂದು

Saturday, 9 September 2017

ಅಂಗಳದ ಕಥೆ ಅದೇ ಹೇಳಿತು...

ಬೆಳಗಿನ ಜಾವದ ಇಬ್ಬನಿಯ ಚಳಿಯಲ್ಲಿ ಭಾಸ್ಕರನ ಎಳೆಯ ಕಿರಣಗಳು ಬೆಚ್ಚಗೆನಿಸುತ್ತದೆ. ಆಗಾಗ ಪಕ್ಷಿಗಳ ಚಿಲಿಪಿಲಿ ಬೆಳಾಗಾಗಿರುವುದನ್ನು ಸಾರುತ್ತಿರುತ್ತದೆ. ಮನೆಯ ಒಡತಿ ಶಾಂತಮ್ಮ ಹಾಡುತ್ತಿದ್ದುದ್ದು ಸುಪ್ರಭಾತವ ಕೇಳುತ್ತಿರುವಂತೆ ಅನ್ನಿಸುತ್ತದೆ. ಬೆಳಗಾಗಿದ್ದರೂ ಇನ್ನು ಮಲಗುವ ಆಸೆ. ಚಂದಿರನ ತೋಳ ತೆಕ್ಕೆಯಲ್ಲಿಯೇ ಇರುವ ಆಸೆ. 
ನೀರಿನ ಹನಿಗಳು ಬಿದ್ದಂತೆಯೇ ನನ್ನ ಕನಸಿನ ಲೋಕದ ಬಾಗಿಲುಗಳು ಮುಚ್ಚಿ ವಾಸ್ತವಿಕತೆಯ ಬಾಗಿಲುಗಳು ತೆರೆದುಕೊಳುತ್ತವೆ. ಬೇಸಿಗೆಯಂತಿಲ್ಲ ಚಳಿಯಂತಿಲ್ಲ, ಪ್ರತೀದಿನ ತಣ್ಣೀರು ಸ್ನಾನವೇ ಗತಿ. ಕಣ್ಣು ಬಿಡುತ್ತಿದ್ದಂತೆಯೇ ಸೂರ್ಯನ ನಗು ಮುಖ. ಆ ಪ್ರಕಾಶ, ಸಕಾರಾತ್ಮಕತೆ ಉತ್ಸಾಹ ಮೂಡಿಸಿತ್ತದೆ. ಹಸಿರು ಸೀರೆ, ಅದರ ಮೇಲೆ ಬಣ್ಣಬಣ್ಣದ ಹೂವುಗಳು. ಅದನ್ನುಟ್ಟು, ರಂಗೋಲಿಯ ಬೊಟ್ಟನಿಟ್ಟು ದಿನವನ್ನು ಆಲಂಗಿಸುತ್ತೇನೆ. ತುಳಸಿಯು ನೆಲೆಸಿ ನನ್ನ ಗೌರವ ಹೆಚ್ಚಿಸಿದ್ದಾಳೆ. ಪ್ರತಿನಿತ್ಯ ಅವಳ ಪೂಜೆ, ಸಂಜೆಯ ದೀಪ, ಇವೆಲ್ಲ ಮನಸ್ಸಿಗೆ ಬಹಳ ಹತ್ತಿರವಾದಂತಹದ್ದು.
ನನಗೆ ನೆಂಟರಿಷ್ಟರು ಸ್ನೇಹಿತರು ಎಂದೆಲ್ಲಾ ಜಾಸ್ತಿ. ಜಾಜಿಯ ರಸ ಹೀರಲು ಜೀರುಂಡೆ ಬಂದ್ರೆ, ತುಂಬೆ ರಸ ಹೀರಕ್ಕೆ ಚಿಟ್ಟೆಗಳು. ಎಷ್ಟು ವಿಧ ಅಂತೀರ. ನನ್ನ ಮೇಲೆ ಕಾಳುಗಳ ಅಭಿಷೇಕ ಆಗುತ್ತಿದ್ದಂತೆಯೇ ಗುಬ್ಬಚ್ಚಿಯ ಚಿಲಿಪಿಲಿ ಕಿವಿಗೆ ಬೀಳುತಿತ್ತು. ವಿಶೇಷ ಅತಿಥಿಗಳು ಎಂದು ಇಲಿಗಳ ಹಿಂದೆ ಬರುವ ನಾಗಪ್ಪ, ವಲಸೆ ಹೋಗುವ ಪಕ್ಷಿಗಳು... ಹೀಗೆ.
ಹಬ್ಬ ಹರಿದಿನಗಳಲ್ಲಿ ಮದುವಣಗಿತ್ತಿಯಂತೆ ಸಿಂಗಾರ ನಂಗೆ. ಗೋಮಯ ಸಾರಿಸಿ, ಲಕ್ಷಣವಾಗಿ ರಂಗೋಲಿ ಹಾಕಿ ಬಣ್ಣ ತುಂಬಿ, ಹೂವಿನ ಅಲಂಕಾರದಿಂದ ಸಿಂಗರಿಸುತ್ತಾರೆ. ಆಚೆ ಈಚೆ ನಿಂತ ಬಾಳೆಗಂಬ ನನಗೆ ಶೋಭಾಯಮಾನ. ಅವರು ಇವರು ಎಂದು ಹತ್ತಿರದ ನೆಂಟರು, ದೂರದ ಸಂಬಂಧಿಕರು ಬರ್ತಾರೆ. ದಿನವಿಡೀ ಮಕ್ಕಳ ಒಂದು ಗುಂಪು ಆಟವಾಡ್ತಿದ್ರೆ, ಒಂದು ಮೂಲೆಯಲ್ಲಿ ಅಜ್ಜರ ಗುಂಪೊಂದು ಹರಟೆ ಹೊಡೆಯುತ್ತಾ ಮಾತಲ್ಲೇ ಪ್ರಪಂಚವನೆಲ್ಲ ಸುತ್ಕೊಂಡು ಬಂದಿರುತ್ತಾರೆ. 
ಹೀಗೆ ದಿನ ಕಳೆಯುವುದೇ ಗೊತ್ತಾಗುವುದಿಲ್ಲ. ಮುಸ್ಸಂಜೆ ಆವರಿಸಿದಂತೆ ನನ್ನ ದಿನದ ಕೆಲಸಗಳಿಗೆ ಬೆಳಕ ನೀಡುವ ಸೂರ್ಯನು ವಿದಾಯ ಹೇಳುತ್ತಾ ಕೆಂಪಡರಿ ಮುಳುಗುತ್ತಾನೆ. ಇನ್ನೇನೆಂದರು ತಮ್ಮ ತಮ್ಮ ಮನೆಗೆ ಹೊರಡುವ ಸ್ನೇಹಿತರಿಗೆ ಮತ್ತೆ ಬನ್ನಿ ಎಂದು ಹೇಳಿಕಳಿಸಿ ಕತ್ತಲನ್ನು ಹೊಕ್ಕುವುದು.  ರಾತ್ರಿಯ ಆ ಸುಂದರ ಮೌನದ ನಡುವೆ ದೂರದಲ್ಲಿ ಮಿನುಗುವ ನಕ್ಷತ್ರಗಳ ಸೌಂದರ್ಯವನ್ನು ಹತ್ತಿರದಲ್ಲೇ ನೋಡುವಂತೆ ಮಾಡುವ ಮಿಣುಕು ಹುಳುಗಳಿಗೆ ಶುಭರಾತ್ರಿಯೆನ್ನುತ್ತಾ ಚಂದಿರನ ತೋಳತೆಕ್ಕೆಗೆ ಮರಳಿ ನಿದ್ರಾದೇವಿಗೆ ಶರಣಾಗುವುದು.

Friday, 8 September 2017

ಮರಗಳು

ಮರಗಳು ಹತಾಶೆಯಿಂದ ನುಡಿದವು
"ಇನ್ನು ಕಾಪಾಡಲಾರೆ
ಇನ್ನು ಹೋರಾಡಲಾರೆ"
"ಸೋಲನ್ನು ಒಪ್ಪಿಕೊಳ್ಳುವೆ" ಎಂದು ನೆಲಕ್ಕೆ ಕುಸಿದವು

ತಾಯಿ ಮತ್ತಷ್ಟು ರೋಧಿಸಿದಳು

ಮನುಷ್ಯನ ಮುಖದಲ್ಲಿ ನಗು!

ಗೆಲುವಿನ ಅಟ್ಟಹಾಸವೋ ಮಳೆಯ ಸಂಭ್ರಮವೋ ತಿಳಿಯದು.

Wednesday, 7 June 2017

ಅಕ್ಕ

ಬಾಲ್ಯದ ನೆನಪಿನಂಗಳದಿ ಬಣ್ನವ ತುಂಬಿದೆ
ಆಟ ಓಡಾಟಗಳಿಂದ ಖುಷಿಯನ್ನು ಚೆಲ್ಲಿ‍ದೆ
ಪ್ರೀತಿ ಸ್ನೆಹದಂದ ಮನವನ್ನು ಗೆದ್ದೆ
ನನ್ನ ಪ್ರೀತಿಯ ಅಕ್ಕ, ನಾನಿಲ್ಲ ನೀನಿಲ್ಲದೆ

ನಿನ್ನಯ ನೆರಳಿನಲ್ಲಿ ಎನ್ನನು ಭದ್ರ ಪಡಿಸಿದೆ
ಕಾಲಕ್ಕೆ ತಕ್ಕಂತೆ ಜಗತ್ತನ್ನು ಪರಿಚಯಿಸಿದೆ
ನನ್ನಯ ಪಥದಲಿ ಸಾಗಲು ಕಲಿಸಿದೆ
ಎನ್ನಯ ಶಕ್ತಿ, ನಾನಿಲ್ಲ ನೀನಿಲ್ಲದೆ

ತಾಯಿಯ ವಾತ್ಸಲ್ಯವ ತುಂಬಿದೆ
ತಂದೆಯ ಪ್ರತಿಬಿಂಬಿಸುವ ವರವ ನೀಡಿದೆ
ಎಲ್ಲರ ಜೀವದ ಜೀವಳವಾದೆ 
ನಮ್ಮಯ ಉಸಿರೆ, ನಾವಿಲ್ಲ ನೀನಿಲ್ಲದೆ

ಬೆಚ್ಚನೆಯ ಗೂಡಿನ ಬೆಳಕಾದೆ
ಈ ಮನೆಯ ಮಂತ್ರ ನೀನಾದೆ
ಇಲ್ಲಿಯ ಖುಷಿಯ ಆಧಾರವಾದೆ 
ಚೈತನ್ಯವೆ, ಮನೆಯ ಚೆತನವಿಲ್ಲ ನೀನಿಲ್ಲದೆ

ಈ ದಿನದ ಸೌಂದರ್ಯಕ್ಕೆ ಕಾರಣವಾದೆ
ಈ ಹಬ್ಬದ ಸಂಭ್ರಮ ನೀನಾದೆ
ಈ ಸಂಭ್ರಮದಿ ನೀ ನಮಗೆ ವರವಾದೆ
ನಮ್ಮೆಲ್ಲರ ಮನಸು ನಿನಗೆ ಶುಭಕೋರಿದೆ

ಇಂತಿ

ಎಂದಿಗೂ ನಿನ್ನಯ

ದೀ 😘😘

ಬೆಳೆದು

ಅಂಬರದ ಅಪ್ಪುಗೆಯಲ್ಲಿ ನಿದ್ರಿಸಿ ವಸುಂಧರೆಯ ಮಡಿಲಿನಿಂದ ಎದ್ದು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ಬಿಸಿಲಲ್ಲಿ ನಕ್ಕು ನಲಿದು ಮಳೆಯಲ್ಲಿ ಕುಣಿದು ಕುಪ್ಪಳಿಸಿ, ತಂಪುಗಾಳಿಯ ಜೊತೆ ಹಾಡುತ್ತಾ, ಗಿಡಮರಗಳ ಜೊತೆ ಅರಳುತ್ತಾ, ಚಿಟ್ಟೆಗಳ ಹಿಂದೆ ಓಡುತ್ತಾ, ಪ್ರಾಣಿಪಕ್ಷಿಗಳ ಸಂಗಡ ಕಲಿಯುತ್ತಾ, ಹಣ್ಣುಹಂಪಲು ಗೆಡ್ಡೆ ಗೆಣಸುಗಳನ್ನು ತಿನುತ್ತಾ... ಬೆಳೆದು... ಬಾಂಧವ್ಯಗಳನ್ನು ಮರೆಯುತ್ತಾ, ಪ್ರಾಣಿಪಕ್ಷಿಗಳನ್ನು ಕೊಲ್ಲುತ್ತಾ, ಮರಗಿಡಳನ್ನು ಕಡಿಯುತ್ತಾ, ಕಲುಷಿತ ಗಾಳಿಯನ್ನು ಸೇವಿಸುತ್ತಾ, ಕೃತಕ ಮಳೆಯಲ್ಲಿ ಕುಣಿದು ಕುಪ್ಪಳಿಸಿ, ಬಿಸಿಲಿಗೆ ಕೊಡೆ ಹಿಡಿದು ದಾಪುಗಾಲು ಹಾಕುತ್ತಾ ಗಗನವ ಛೇದಿಸಿ ಮುನ್ನುಗ್ಗಿ ಮುಂದೇನೆಂದು ಯೋಚಿಸುತ್ತಾ...