Wednesday 27 December 2017

ಶೃಂಗೇರಿಯ ಮಡಿಲಲ್ಲೊಂದು ಮುಂಜಾನೆ

ಆಗಸವನ್ನೇ ಭೇದಿಸುವೆನೆಂದು ಹೊರಟು ಮರೆಯಾಗಿತ್ತು ಸಹ್ಯಾದ್ರಿಯ ಶಿಖರ. ಗೆಲುವಿನ ಕಹಳೆಯ ನಾದವ ಹೊರಡಿಸುತ್ತಾ ನಿಂತಿದ್ದವು ಮೋಡಗಳು. ಮೇಘರಾಜನ ಬಾಣಗಳಂತಿದ್ದರೂ ತಂಪನೀಯುತ್ತಿದ್ದವು ಮಳೆ ಹನಿಗಳು. ನಭದ ನೀಲಿಮೆಯನ್ನು ಮುಟ್ಟುವ ಆಸೆಯಿಂದ ಹೊರಟು ನಿಂತಿದ್ದರೂ ವಸುಂಧರೆಯನ್ನು ಬಿಡಲು ಮನಸ್ಸಿಲ್ಲದೆ ಮಣ್ಣಿಗೆ ಅಂಟುಕೊಂಡಿದ್ದವು ತರುಗಳು. ಈ ಮರಗಳ ನಡುವೆಯಿಂದ ತಂಪನೆಯ ಗಾಳಿ ಮೆಲ್ಲಗೆ ನುಸುಳಿ ಬಂದು ಕ್ಷೇಮ ಸಮಾಚಾರ ವಿಚಾರಿಸುತಿತ್ತು. ಇದ್ದೂ ಇಲ್ಲದಂತೆ ಮೌನವಾಗಿ ಹರಿಯುತ್ತಿದ್ದಳು ತುಂಗೆ, ಮನಸ್ಸನ್ನು ಶಾಂತಗೊಳಿಸುತ್ತಾ, ಆತ್ಮವನ್ನು ಶುದ್ಧಗೊಳಿಸುತ್ತಾ. ಕರುವು ತನ್ನ ತಾಯಿಯ ಮೊಲೆಯ ಅಮೃತವನ್ನು ಹೀರುತ್ತಿದ್ದರೆ ಮಳೆಯಿಂದ ಪುಳಕಿತಗೊಂಡ ಕೋಗಿಲೆಯು ಸುಪ್ರಭಾತವ ಹಾಡುತಿತ್ತು. ಇಲ್ಲಿಯೇ ನೆಲೆಸಿದ್ದಳು ಶೃಂಗೇರಿಯ ಶಾರದೆ. ಶಾರದೆಯ ಶೃಂಗಾರದಲ್ಲಿ ಕಿಂಚಿತ್ತು ಕಮ್ಮಿ ಮಾಡಿರಲಿಲ್ಲ ಪ್ರಕೃತಿ ಮಾತೆ. ಹಸಿರಿನ ಹಾಸಿನ ಮೇಲೆ ರಾರಾಜಿಸುತ್ತಾ, ಪರಿಸರದ ಸುಗಂಧದಿ ಸುತ್ತುವರೆದು, ನಾನಾ ಕುಸುಮಗಳಿಂದ ಅಲಂಕೃತಗೊಂಡು, ಹಕ್ಕಿ ಪಕ್ಷಿಗಳ ಸಂಗೀತ ಆಲಿಸುತ್ತಾ, ಅಳಿಲು ಚಿಟ್ಟೆ ಜಿಂಕೆ ನವಿಲುಗಳ ಆಟಗಳನ್ನ ನೋಡುತ್ತಾ ಸಂಭ್ರಮಿಸಿದ್ದಳು ಶಾರದೆ. 
ಈ ಸುಂದರ ದೃಶ್ಯವನ್ನು ಕಣ್ತುಂಬಿಕೊಂಡಷ್ಟು ಕಮ್ಮಿ. ನೋಡಿದರೆ ಮನಸ್ಸಿಗೆ ಬರುವ ಪ್ರಶ್ನೆ ಒಂದೇ. ಶೃಂಗೇರಿ ಶಾರದೆಯನ್ನ ಅಲಂಕರಿಸಿದ್ದಳೋ ಅಥವ ಶಾರದೆ ಶೃಂಗೇರಿಯನ್ನ ಅಲಂಕರಿಸಿದ್ದಳೋ ಎಂದು.